ಉಪನ್ಯಾಸಕರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಾಗ ಮಕ್ಕಳ ಭವಿಷ್ಯ ಉತ್ತಮಗೊಳ್ಳಲಿದೆ

ಉಪನ್ಯಾಸಕರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಾಗ  ಮಕ್ಕಳ ಭವಿಷ್ಯ ಉತ್ತಮಗೊಳ್ಳಲಿದೆ Children's future will be better when lecturers are fully involved

             ಕೊಪ್ಪಳ  20:  ಉಪನ್ಯಾಸಕರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಾಗ ಮಾತ್ರ ಮಕ್ಕಳ ಭವಿಷ್ಯ ಉತ್ತಮಗೊಳ್ಳಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಿ.ಎಚ್‌.ಜಗದೀಶರವರು ನುಡಿದರು. ಅವರು ಕೊಪ್ಪಳ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಕನ್ನಡ, ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಷಯಗಳ ಎರಡು ದಿನದ ಪುನಶ್ಚೇತನ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಉಪನ್ಯಾಸಕರು ಜಡತ್ವದಿಂದ ಹೊರಬರಬೇಕು, ಇಲಾಖೆಯ ನಿಯಮಗಳು ಬದಲಾದಾಗ ಉಪನ್ಯಾಸದಕರೂ ಸಹ ಬದಲಾಗಬೇಕು ಆಗ ಮಾತ್ರ ಉತ್ತಮ ಫಲಿತಾಂಶ ಬರಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಬಸಪ್ಪ ನಾಗೋಲಿಯವರು ಮಾತನಾಡುತ್ತಾ ಉಪನ್ಯಾಸಕರು ಸಮಾಜಮುಖಿಯಾಗಿ ಕೆಲಸ ಮಾಡಬೇಕು, ಮಕ್ಕಳಲ್ಲಿ ಹೊಸತನ ತರಬೇಕೆಂದು ನುಡಿದರು.

             ಮತ್ತೋರ್ವ ಅಥಿತಿಯಾಗಿ ಭಾಗವಹಿಸಿದ್ದ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಸೋಮಶೇಖರ ಗೌಡರವರು ಮಾತನಾಡಿ ಉಪನ್ಯಾಸಕರಿಗೆ ಒತ್ತಡವಿರುವುದು ನಿಜ ಆದರೆ ಮಕ್ಕಳಿಗೆ ಅನ್ಯಾಯ ಮಾಡಬಾರದು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಎ.ಆರ್‌.ಶಿವಾಂದರವರು ಮಾತನಾಡಿ ನಮ್ಮದು ಉತ್ತಮ ಫಲಿತಾಂಶದ ಕಡೆ ಗುರಿ ಇರಬೇಕು ಎಂದರು. ವೇದಿಕೆಯ ಮೇಲೆ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊಳಗುಂದಿ ಮತ್ತು ಎಸ್‌.ವಿ.ಮೇಳಿಯವರು ಉಪಸ್ಥಿತರಿದ್ದರು. ಕುಮಾರಿ ನಯನ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಸ್ವಾಗತಿಸಿದರೆ ಕೊನೆಗೆ ಯಂಕಪ್ಪ ಗೊಲ್ಲರ್ ವಂದಿಸಿದರು. ಶೇಖ್‌ಬಾಬು ಶಿವಾಪುರ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಗಾರದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಕನ್ನಡ, ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರಗಳ ಉಪನ್ಯಾಸಕರುಗಳು ಭಾಗವಹಿಸಿದ್ದರು.