‘ನಾಟಕಗಳು ಜೀವನ ಮೌಲ್ಯಗಳನ್ನು ಬಿತ್ತುವ ಪ್ರಭಲ ಮಾಧ್ಯಮ’

‘ನಾಟಕಗಳು ಜೀವನ ಮೌಲ್ಯಗಳನ್ನು ಬಿತ್ತುವ ಪ್ರಭಲ ಮಾಧ್ಯಮ’ 'Plays are a powerful medium for instilling life values'

ಲೋಕದರ್ಶನ ವರದಿ 

ಧಾರವಾಡ 29: ನಾಟಕಗಳು ಕೇವಲ ಮನರಂಜನೆ ನೀಡುವ ಉದ್ದೇಶ ಮಾತ್ರವಲ್ಲ, ನಮಗೆ ಬದುಕಿನ ಪಾಠ ಹಾಗೂ ಜೀವನ ಮೌಲ್ಯಗಳನ್ನು ಬಿತ್ತುವ ಪ್ರಭಲ ಮಾಧ್ಯಮ ಎಂದು ಕಲಾವಿದರಾದ ಮೇಘನಾ ಹುಕ್ಕೇರಿ ಅಭಿಪ್ರಾಯಪಟ್ಟರು. 

ಅವರು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಾಜ್ಯೋತ್ಸವ ನಿಮಿತ್ತ ಆಯೋಜಿಸಿದ್ದ 10 ದಿನಗಳ ನಾಟಕೋತ್ಸವದಲ್ಲಿ “ಫಾರ ಎ ಬೈಟ್ ಆಫ್ ಫೂಡ್‌” ನಾಟಕಕ್ಕೆ ಚಾಲನೆ ನೀಡಿ, ಮಾತನಾಡಿದರು. 

ಕವಿವ ಸಂಘವು ರಾಜ್ಯೋತ್ಸವದ ನಿಮಿತ್ತ ತಿಂಗಳ ಕಾರ್ಯಕ್ರಮ ಆಯೋಜಿಸಿ ಸಾಧಕರಿಗೆ, ರಂಗ ಕಲಾವಿದರಿಗೆ, ಮಕ್ಕಳಿಗಾಗಿ ಕಾರ್ಯಕ್ರಮ ಆಯೋಜಿಸುತ್ತಿರುವ ಪರಂಪರೆ ಅಭಿನಂದನೀಯ. ಹತ್ತು ದಿನಗಳ ನಾಟಕೋತ್ಸವದಲ್ಲಿ ರಂಗ ಕಲಾವಿದರ ಸೇವೆ ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ. ಆದರೆ, ನಾಟಕಗಳಿಗೆ ಪ್ರೇಕ್ಷಕರೇ ಜೀವಾಳವಾಗಿರುವುದರಿಂದ ಪ್ರೇಕ್ಷಕರ ಕೊರತೆಯಾಗಬಾರದು. ರಂಗ ಕಲಾವಿದರ ಬಣ್ಣದ ಬದುಕು ಮಾಸಬಾರದು. ಕಲೆ ಹಾಗೂ ಕಲಾವಿದರು ಸಹ ನಮ್ಮ ಸಂಸ್ಕೃತಿಯ ಒಂದು ಭಾಗ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ರಂಗ ಕಲಾವಿದರಾದ ಹುಬ್ಬಳ್ಳಿಯ ಗೀತಾ ಶೃಂಗೇರಿ ಹಾಗೂ ಲಕ್ಷ್ಮೀ ಹೊಸಪೇಟ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಂಕರ ಕುಂಬಿ, ವೀರಣ್ಣ ಒಡ್ಡೀನ, ಡಾ. ಸದಾಶಿವ ಮರ್ಜಿ, ಡಾ. ಮಂಜುಳಾ ಮರ್ಜಿ, ಡಾ. ಪ್ರಭು ಹಂಚಿನಾಳ, ಸಿ.ಎಸ್‌. ಪಾಟೀಲ ಕುಲಕರ್ಣಿ, ಜಯಶ್ರೀ ಗುಡಗೇರಿ, ಮಲ್ಲು ಗುಡಿಗೇರಿ, ಭೀಮು ಖಟಾವಿ ಸೇರಿದಂತೆ ಕಲಾವಿದರು, ರಂಗಾಸಕ್ತರು ಇದ್ದರು. ಕೊನೆಯಲ್ಲಿ ಶಕೀಲ್ ಅಹಮ್ಮದ ನಿರ್ದೇಶನದ “ಫಾರ್ ಎ ಬೈಟ್ ದಿ ಫೂಡ್‌” ಎಂಬ ನಾಟಕ ವಿಜಯಪುರದ ಲೋಣಿ, ಸ್ಪಿನಿಂಗ್ ಟ್ರೀ ಥಿಯೇಟರ್ ತಂಡದವರು ಪ್ರದರ್ಶಿಸಿದರು.