‘ಸ್ಕಿಲ್ ಕೋರ್ಸುಗಳಲ್ಲಿ ವಿದ್ಯಾರ್ಥಿನಿಯರ ಪಾಲ್ಗೊಳ್ಳುವಿಕೆ ಇಂದಿನ ಅಗತ್ಯ’

‘ಸ್ಕಿಲ್ ಕೋರ್ಸುಗಳಲ್ಲಿ ವಿದ್ಯಾರ್ಥಿನಿಯರ ಪಾಲ್ಗೊಳ್ಳುವಿಕೆ ಇಂದಿನ ಅಗತ್ಯ’ 'Participation of female students in skill courses is the need of the hour'

ಲೋಕದರ್ಶನ ವರದಿ 

ವಿಜಯಪುರ 10: ವೃತ್ತಿಪರ, ತಾಂತ್ರಿಕ ಹಾಗೂ ಉದಯೋನ್ಮುಖ ತಂತ್ರಜ್ಞಾನ ಶಿಕ್ಷಣದಲ್ಲಿ ಮಹಿಳೆಯರ ಪ್ರವೇಶವನ್ನು ವಿಸ್ತರಿಸುವುದು, ಪಠ್ಯಕ್ರಮ ಮತ್ತು ಬೋಧನಾ ವಿಧಾನಗಳಲ್ಲಿ ಅಗತ್ಯ ಸುಧಾರಣೆಗಳನ್ನು ತರಿಸುವುದು ಹಾಗೂ ಸ್ಕಿಲ್ ಕೋರ್ಸುಗಳಲ್ಲಿ ವಿದ್ಯಾರ್ಥಿನಿಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು ಇಂದಿನ ಅಗತ್ಯವೆಂದು ಹಿರಿಯ ನೋಡಲ್ ಅಧಿಕಾರಿ ಪ್ರೊ. ಜಿ. ಬಿ ಸೋನಾರ್ ಹೇಳಿದರು. 

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ಲೇಸ್‌ಮೆಂಟ್ ಮತ್ತು ವೃತ್ತಿ ಮಾರ್ಗದರ್ಶನ ಕೋಶ ಹಾಗು ಸಮಾಜ ಶಾಸ್ತ್ರ ಅಧ್ಯಯನ ವಿಭಾಗದ ಸಂಯುಕ್ತಾಶ್ರಯದಲ್ಲಿ ಪ್ರಧಾನಮಂತ್ರಿ ಉಚ್ಚತರ ಶಿಕ್ಷಣ ಅಭಿಯಾನ ಪಿಎಂ ಉಷಾ ಭಾರತ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಪರಿಷತ್ತಿನ ಅನುದಾನದೊಂದಿಗೆ ಇತ್ತೀಚಿಗೆ ಹಮ್ಮಿಕೊಂಡಿದ್ದ ಮಹಿಳೆಯರಿಗೆ ವೃತ್ತಿಪರ, ತಾಂತ್ರಿಕ ಮತ್ತು ಉದಯೋನ್ಮುಖ ತಂತ್ರಜ್ಞಾನ ಶಿಕ್ಷಣದಲ್ಲಿ ಪ್ರವೇಶವನ್ನು ಸುಲಭಗೊಳಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.  

ಮಹಿಳೆಯರು ತಾಂತ್ರಿಕ ಹಾಗೂ ನವೀನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು, ಶಿಕ್ಷಣ ಸಂಸ್ಥೆಗಳು ಕೈಗಾರಿಕಾ ಬೇಡಿಕೆಗೆ ಹೊಂದಿಕೊಳ್ಳುವ ರೀತಿಯಲ್ಲಿ ಪಠ್ಯಕ್ರಮಗಳನ್ನು ಪರಿಷ್ಕರಿಸಬೇಕು, ಕೃತಕ ಬುದ್ಧಿಮತ್ತೆ, ಡೇಟಾ ವಿಜ್ಞಾನ, ಸೈಬರ್ ಸುರಕ್ಷತೆ, ರೋಬೋಟಿಕ್ಸ್‌ ಮುಂತಾದ ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ವಿದ್ಯಾರ್ಥಿನಿಯರಿಗೆ ನೈಪುಣ್ಯ ಒದಗಿಸುವುದರಿಂದ ಭವಿಷ್ಯದ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದು ತಿಳಿಸಿದರು. 

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಿಜಯಪುರದ ಎಸ್‌.ಬಿ. ಆರ್ಟ್ಸ್‌ ಮತ್ತು ಕೆ.ಸಿ.ಪಿ. ಸೈನ್ಸ್‌ಕಾಲೇಜಿನ ಕಾಲೇಜಿನ ಗಣಕಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀಧರ್ ಜೋಶಿ ಮಾತನಾಡಿ, ಇಂದಿನ ಜಗತ್ತು ಸಂಪೂರ್ಣವಾಗಿ ತಂತ್ರಜ್ಞಾನ ಆಧಾರಿತವಾಗಿದೆ. ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್‌, ಸೈಬರ್ ಸುರಕ್ಷತೆ, ಕ್ಲೌಡ್ ಕಂಪ್ಯೂಟಿಂಗ್, ಇಂಟರ್ನೆಟ್ ಆಫ್ ಥಿಂಗ್ಸ್‌ ಮುಂತಾದ ಉದಯೋನ್ಮುಖ ತಂತ್ರಜ್ಞಾನಗಳು ನಮ್ಮ ಜೀವನಶೈಲಿ ಹಾಗೂ ಉದ್ಯೋಗಕ್ಷೇತ್ರವನ್ನು ವೇಗವಾಗಿ ಬದಲಾಯಿಸುತ್ತಿವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ತಾಂತ್ರಿಕ ಮೂಲಾಧಾರಗಳನ್ನು ಗಟ್ಟಿಗೊಳಿಸಿಕೊಳ್ಳುವುದು ಅತ್ಯಂತ ಅವಶ್ಯಕ, ಎಂದು ಹೇಳಿದರು. 

ಕಾರ್ಯಾಗಾರದ ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರಿನ ನೆತ್ರೆಕಾನ್ ಸೊಲ್ಯೂಷನ್ಸ್‌ನ ಕಾರ​‍್ೊರೇಟ್ ತರಬೇತುದಾರ ಪವನ್ ಜಿ ಮಾತನಾಡಿ, ತಾಂತ್ರಿಕ ಜ್ಞಾನವು ಉದ್ಯೋಗಕ್ಕೆ ಪ್ರವೇಶದ್ವಾರವಾಗಿದ್ದರೆ, ಸಾಫ್ಟ್‌ ಸ್ಕಿಲ್ಸ್‌ ಯಶಸ್ಸಿನ ಪಥವಾಗಿದೆ. ಇಂದಿನ ಕಾರ​‍್ೊರೇಟ್ ಲೋಕದಲ್ಲಿ ಕೇವಲ ತಾಂತ್ರಿಕ ಕೌಶಲ್ಯ ಮಾತ್ರವಲ್ಲ, ಸಂವಹನ ಕೌಶಲ್ಯ, ತಂಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ನಾಯಕತ್ವ ಗುಣಗಳು ಹಾಗೂ ಸಮಯ ನಿರ್ವಹಣೆ ಅತ್ಯಂತ ಮುಖ್ಯ, ಎಂದು ಹೇಳಿದರು. 

ಕಾರ್ಯಕ್ರಮದ ಸಂಯೋಜಕ ಡಾ. ಸಿ. ಎಂ. ಮಠಪತಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.   

ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ತ ಪ್ರೊ. ಎಂ. ಪಿ. ಬಳಿಗಾರ್, ವಿವಿಧ ವಿಭಾಗಗಳ ವಿದ್ಯಾರ್ಥಿನಿಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಉಪಸ್ಥಿತರಿದ್ದರು.