‘ಜನಾಂದೋಲನ ರೂಪಿಸಿ ಕೃಷಿ ಜಮೀನು ಉಳಿಸಿ’

‘ಜನಾಂದೋಲನ ರೂಪಿಸಿ ಕೃಷಿ ಜಮೀನು ಉಳಿಸಿ’ 'Create a people's movement and save agricultural land'

ಕಾಶಿ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಶರನ್ನವರಾತ್ರಿ ಸಂದೇಶ 

ಧಾರವಾಡ  26: ವಾಸದ ಮನೆ ನಿರ್ಮಾಣವೂ ಸೇರಿದಂತೆ ವಿಭಿನ್ನ ಕೃಷಿಯೇತರ ಕೆಲಸಗಳಿಗೆ ಒಕ್ಕಲುತನದ ಅಮೂಲ್ಯ ಸಾಗುವಳಿ ಭೂಮಿ ಮಾರಾಟವಾಗುತ್ತಿರುವುದು ಮನುಕುಲಕ್ಕೆ ಮಾರಕವಾಗಿದ್ದು, ದೇಶದೆಲ್ಲೆಡೆ ಜನಾಂದೋಲನ ರೂಪಿಸಿ ಕೃಷಿ ಜಮೀನು ಉಳಿಸಲು ಗಂಭೀರ ಚಿಂತನೆ ನಡೆಯಬೇಕೆಂದು ವೀರಶೈವ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ನಗರದ ತಮ್ಮ ಜ್ಞಾನ ಪೀಠದಲ್ಲಿ ಶರನ್ನವರಾತ್ರಿ ಆಚರಣೆಯ ಕರೆ ನೀಡಿದರು.  

ಅವರು ಉತ್ತರ​‍್ರದೇಶದ ವಾರಾಣಾಸಿ ನಗರದ ತಮ್ಮ ಜ್ಞಾನ ಪೀಠದಲ್ಲಿ ಶರನ್ನವರಾತ್ರಿ ಆಚರಣೆಯ ಸಂದರ್ಭದಲ್ಲಿ ಶುಕ್ರವಾರ 5ನೆಯ ದಿನದ ಶುಭಾಶೀರ್ವಾದ ಸಂದೇಶ ನೀಡಿ ಮಾತನಾಡುತ್ತಿದ್ದರು. ಮಾನವರ ಹಸಿವನ್ನು ಹಿಂಗಿಸುವ ಬಹುದೊಡ್ಡ ಶಕ್ತಿ ಭೂಮಾತೆಯ ಒಡಲಿನಲ್ಲಿದೆ. ಭೂತಾಯಿಯು ಹೊಂದಿರುವ ಮಣ್ಣಿನ ಕಣಗಳಲ್ಲಿ ಬೀಜಾಂಕುರದ ಬಹುದೊಡ್ಡ ಶಕ್ತಿ ಇರುವದನ್ನು ಪರಿಗಣಿಸಿ ಧರಿತ್ರಿಯನ್ನೂ ಸಹ ಆದಿಶಕ್ತಿ ಮಾತೆಯ ಸ್ವರೂಪದಲ್ಲಿ ರೈತರು ಪೂಜಿಸುತ್ತ ಬಂದಿದ್ದಾರೆ. ಪ್ರಸ್ತುತ ಶರನ್ನವರಾತ್ರಿಯ ಪರ್ವಕಾಲದಲ್ಲಿ ಕೃಷಿ ಭೂಮಿಯನ್ನು ಉಳಿಸಲು ತನ್ಮೂಲಕ ರೈತರ ಬದುಕನ್ನೂ ಉಳಿಸುವ ಸಂಕಲ್ಪ ಮಾಡಬೇಕು. ಅಂದಾಗ ಮಾತ್ರ ಶರನ್ನವರಾತ್ರಿ ಆಚರಣೆಯ ಆದಿಶಕ್ತಿ ಮಾತೆಯ ಪೂಜಾ ಕೈಂಕರ್ಯಗಳಿಗೆ ಅರ್ಥ ಬರುತ್ತದೆ ಎಂದರು.  

ಆಹಾರ ಭದ್ರತೆ : ಕೃಷಿ ಪ್ರಧಾನವಾದ ಭಾರತದಲ್ಲಿ ವಾಸಿಸುತ್ತಿರುವ ಸುಮಾರು 140 ಕೋಟಿಗೂ ಅಧಿಕವಾದ ಜನತೆಗೆ ಆಹಾರ ಭದ್ರತೆ ಒದಗಿಸಬೇಕಾದ ಜವಾಬ್ದಾರಿ ನಮ್ಮ ಸರಕಾರಗಳ ಮೇಲಿದೆ. ಅತ್ಯಮೂಲ್ಯವಾದ ಕೃಷಿ ಸಾಗುವಳಿ ಜಮೀನು ಉಳಿದಾಗ ಮಾತ್ರ ಭಾರತದ ಒಕ್ಕಲುತನ ಉಳಿದು ಬೆಳೆದು ವಿಕಾಸಗೊಳ್ಳಲು ಸಾಧ್ಯವಾಗುತ್ತದೆ. ಆಗ ಮಾತ್ರ ಭಾರತೀಯರೆಲ್ಲರಿಗೂ ಆಹಾರ ಭದ್ರತೆ ಒದಗಿಸಲು ಸಾಧ್ಯವಾಗುತ್ತದೆ. ಇದು ಭವಿಷ್ಯದ ಬಹು ದೂರದೃಷ್ಟಿಯ ಜನಪರ ಚಿಂತನೆಯಾಗಿದ್ದು, ನಮ್ಮ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ವಿಷಯವಾಗಿ ಗಂಭೀರ ಚಿಂತನೆ ನಡೆಸಬೇಕೆಂದು ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕರೆ ನೀಡಿದರು.  

ವಾರಾಣಾಸಿಯ ವಿವಿಧ ಸಂಸ್ಕೃತ ವಿದ್ವಾಂಸರು ಪಾಲ್ಗೊಂಡಿದ್ದರು. ನಳಿನಿ ಚಿರಮೇ ಸ್ವಾಗತಿಸಿದರು. ಶಿವಮೂರ್ತಿ ಹಿರೇಮಠ ನಿರೂಪಿಸಿದರು. ಶಿವಾನಂದ ಹಿರೇಮಠ ವಂದಿಸಿದರು.