ವಚನ ದೀಪ-03



ವಚನ: 

ಅಯ್ಯಾ, ನೀ ಮಾಡಲಾದ ಜಗತ್ತು, ಅಯ್ಯಾ ನೀ ಮಾಡಲಾದ ಸಂಸಾರ, 

ಅಯ್ಯಾ, ನೀ ಮಾಡಲಾದ ಮರವೆ, ಅಯ್ಯಾ, ನೀ ಮಾಡಲಾದ ದುಃಖ, 

ಅಯ್ಯಾ, ನೀ ಬಿಡಿಸಿದಡೆ ಬಿಟ್ಟಿತ್ತು ತಾಮಸ. 

ಅಯ್ಯಾ ನಾನೀ ಮಾಯೆಯ ಗೆದ್ದೆನೆಂಬ ಹಮ್ಮಿನ್ನೇಕೆ 

ಕೂಡಲಸಂಗಮದೇವಾ. 

ಅರ್ಥ: 

ಹೇ ಸೃಷ್ಟಿಕರ್ತ ಪರಮಾತ್ಮನೇ ಇದು ನೀನು ಮಾಡಿದ ಪ್ರಪಂಚ, ಈ ಪ್ರಪಂಚದಲ್ಲಿ ನಾನು ಸಂಸಾರದ, ಸುಖ- ದುಃಖಗಳ, ನೋವು-ನಲಿವುಗಳ ಬಂಧನದಲ್ಲಿ ಸಿಲುಕಿಕೊಂಡಿದ್ದೇನೆ. ಹೇ ಭಗವಂತ ಈ ಬಂಧನಗಳಿಂದ ನೀನು ಬಿಡಿಸಿದರೆ ಮಾತ್ರ ನಾನು ಈ ಮಾಯಾ ಪ್ರಪಂಚದಿಂದ ಬಿಡುಗಡೆಯಾಗಲು ಸಾಧ್ಯ. ನೀನು ಬಿಡುಗಡೆ ಮಾಡಿದ ನಂತರವೂ "ನಾನು ಈ ಮಾಯೆಯನ್ನು ಗೆದ್ದು ಬಿಟ್ಟೆನೆಂಬ" ಅಹಂಕಾರ ನನಗೇಕೆ ಬರುತ್ತದೆ ಭಗವಂತ..?  

- ಶ್ವೇತಾ ಫಣಿವೇಣಿ