ಅಳ್ವೇಕೋಡಿ ಸಮುದ್ರದಲ್ಲಿ ಭಾರಿ ದುರಂತ; ಚಿಪ್ಪು ಹೆಕ್ಕಲು ಹೋಗಿದ್ದ ಒಂದೇ ಕುಟುಂಬದ 8 ಮಂದಿ ಜಲಸಮಾಧಿ

ಅಳ್ವೇಕೋಡಿ ಸಮುದ್ರದಲ್ಲಿ ಭಾರಿ ದುರಂತ; ಚಿಪ್ಪು ಹೆಕ್ಕಲು ಹೋಗಿದ್ದ ಒಂದೇ ಕುಟುಂಬದ 8 ಮಂದಿ ಜಲಸಮಾಧಿ Major tragedy in Alvekodi sea; 8 members of the same family drown while going shell collecting

ಕಾರವಾರ 24  : ಭಟ್ಕಳ ತಾಲೂಕಿನ ಅಳ್ವೇಕೋಡಿ ತಟ್ಟೆ ಹಕ್ಕಲು  ನದಿ  ತೀರದಲ್ಲಿ 8 ಜನ ಜಲಸಮಾಧಿಯಾದ  ದುರಂತ ಘಟನೆ ನಡೆದಿದೆ.  ತಟ್ಟೆ ಹಕ್ಕಲು ಉಪ ನದಿಯ ತೀರದಲ್ಲಿ ತೀಸರೆ  ಚಿಪ್ಪೆ  ( ಬೆಳಚು) ಹೆಕ್ಕಲು ತೆರಳಿದ್ದ ಒಂದೇ ಕುಟುಂಬದ ಎಂಟು ಮಂದಿ ನದಿಯ ಅಬ್ಬರದ ಸೆಳವಿಗೆ ಸಿಕ್ಕಿ  ಕೊಚ್ಚಿಹೋಗಿ ಜಲಸಮಾಧಿಯಾಗಿದ್ದಾರೆ. ಓರ್ವ ಪುರುಷ, ಏಳು ಜನ ಮಹಿಳೆಯರು ಸಾವನ್ನಪ್ಪಿದ್ದಾರೆ. ಒಬ್ಬ ಪುರುಷ, ಒಬ್ಬ ಮಹಿಳೆಯ ಶವಕ್ಕಾಗಿ ಹುಡುಕಾಟ ನಡೆದಿದೆ. ನಾಡದೋಣಿ ಬಳಸಿ ಮೀನುಗಾರರು, ಆಗ್ನಿಶಾಮಕ ದಳದವರು , ಪೊಲೀಸರು ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು ಅವರಿಗೆ  ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಸಲಾಗುತ್ತಿದೆ. ಒಬ್ಬ ಮಹಿಳೆ ಮೊದಲು ನೀರಿನ ಸೆಳೆವಿಗೆ ಸಿಕ್ಕಳು, ಆಕೆಯನ್ನು ರಕ್ಷಿಸಲು ಪುರುಷ ಮುಂದಾಗಿದ್ದು, ಆತ ನೀರಿನ ಸೆಳೆತಕ್ಕೆ ಸಿಕ್ಕಿದ್ದಾರೆ.

ಅವರನ್ನು ರಕ್ಷಿಸಲು ಇತರೆ ಮಹಿಳೆಯರು ಮುಂದಾಗಿದ್ದು, ಒಬ್ಬರನ್ನು ರಕ್ಷಿಸಲು ಮುಂದಾಗಿ ಹದಿನಾಲ್ಕು ಜನರ ಪೈಕಿ ಹತ್ತು ಜನ ನೀರಲ್ಲಿ ಮುಳುಗಿದರು. 8 ಜನ ಸಾವನ್ನಪ್ಪಿದ್ದು, ಇಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಘಟನೆಯಲ್ಲಿ ಇನ್ನೂ ಇಬ್ಬರು ನಾಪತ್ತೆಯಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಬರುತ್ತಿದೆ.   ಒಟ್ಟು 14 ಜನರಿದ್ದ ತಂಡವೊಂದು ಅಳಿವೆಕೋಡಿ ನದಿ ಸಮುದ್ರ ಸಂಗಮದ  ತೀರಕ್ಕೆ ತೆರಳಿತ್ತು. ಈ ವೇಳೆ ನದಿಯಲ್ಲಿ ಚಿಪ್ಪೆಕಲ್ಲು  ತೆಗೆಯಲು ನೀರಿನಲ್ಲಿ ಇಳಿದಾಗ, ಏಕಾಏಕಿ ಬಂದ ಭಾರೀ ಪ್ರವಾಹದ  ಸೆಳೆತಕ್ಕೆ ಸಿಲುಕಿ ನೋಡನೋಡುತ್ತಿದ್ದಂತೆಯೇ ನೀರು ಪಾಲಾಗಿದ್ದಾರೆ.ಈ ಅವಘಡದಲ್ಲಿ 8 ಮಂದಿ ಸಾವನ್ನಪ್ಪಿದ್ದು, ಎಲ್ಲರೂ ಒಂದೇ ಕುಟುಂಬದವರು ಎಂಬುದು ದೃಢಪಟ್ಟಿದೆ. ಅಲೆಗಳ ಅಬ್ಬರಕ್ಕೆ ಕೊಚ್ಚಿಹೋದ ಮೂವರಿಗಾಗಿ ಸಮುದ್ರದಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.

ಮೃತಪಟ್ಟವರೆಲ್ಲರೂ ಭಟ್ಕಳ ತಾಲೂಕಿನ ಸಾರದಹೊಳೆಯ ಹೆರಿಹಿತ್ಲು ಮೂಲದ ನಿವಾಸಿಗಳು ಎಂದು ತಿಳಿದುಬಂದಿದೆ.*ಸಂಬಂಧಿಕರ ಆಕ್ರಂದನ :ನದಿ ಸಮುದ್ರದಲ್ಲಿ ಕೊಚ್ಚಿಹೋದವರ ಪೈಕಿ ಆರು ಮೃತದೇಹಗಳನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಉಳಿದ ಎರಡು ಮೃತದೇಹಗಳನ್ನು ಆರ್‌.ಎನ್‌.ಎಸ್  ಆಸ್ಪತ್ರೆಗೆ ರವಾನಿಸಲಾಗಿದೆ. ಒಂದೇ ಕುಟುಂಬದ ಎಂಟು ಮಂದಿ ಅಸುನೀಗಿದ ಸುದ್ದಿ ತಿಳಿದು ಆಸ್ಪತ್ರೆಯ ಬಳಿ ಜಮಾಯಿಸಿರುವ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.ಘಟನೆ ಕುರಿತಂತೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಹಾಗೂ ಹೆಚ್ಚಿನ ತನಿಖೆ ಮುಂದುವರಿದಿದೆ. ಸಿಎಂ  ಸಿದ್ದರಾಮಯ್ಯ ರಿಂದ ಸಂತಾಪ: ಮೃತರ ಕುಟುಂಬಕ್ಕೆ 5  ಲಕ್ಷ ರೂ.

ಪರಿಹಾರ ಘೋಷಣೆ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ತಟ್ಟೆಹಕ್ಕಲು ಕಡಲ ತೀರದಲ್ಲಿ ಕಪ್ಪೆಚಿಪ್ಪು ತರಲು ಹೋದವರ ಪೈಕಿ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವೀಗೀಡಾಗಿದ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.ಇದೊಂದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಘಟನೆ. ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಇನ್ನೂ ಕೆಲವರು ಈ ದುರ್ಘಟನೆಯಲ್ಲಿ ಕಾಣೆಯಾಗಿರುವ ಮಾಹಿತಿಯಿದ್ದು, ಅವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಕಾಣೆಯಾದವರು ಬದುಕಿಬಂದು ತಮ್ಮವರನ್ನು ಕೂಡಿಕೊಳ್ಳಲಿ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸೋಣ ಎಂದಿದ್ದಾರೆ.....